ಬೆಂಗಳೂರು : ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಹಲೋಕ ತ್ಯಜಿಸಿದ್ದಾರೆ. ನವೆಂಬರ್ 2ರಿಂದ ಜಯನಗರ ಅಪೊಲೋ ಆಸ್ಪತ್ರೆಯಲ್ಲಿ ತಿಮ್ಮಕ್ಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ 114 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಕೊನೆಯುಸಿರೆಳೆದಿದ್ದಾರೆ.
ವೃಕ್ಷಮಾತೆಯ ಹಿನ್ನೆಲೆ :-
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗುತ್ತದೆ.
ಆದ್ರೆ ಚಿಕ್ಕಯ್ಯ-ತಿಮ್ಮಯ್ಯ ದಂಪತಿಗೆ ಮಕ್ಕಳಾಗುವುದಿಲ್ಲ. ಮಕ್ಕಳಿಲ್ಲದ ದುಃಖವನ್ನು ಮರೆಯಲು ತಿಮ್ಮಕ್ಕ ಅವರು ಮರಗಳನ್ನು ನೆಡಲು ಆರಂಭಿಸುತ್ತಾರೆ. ರಾಜ್ಯ ಹೆದ್ದಾರಿ 99ರ ಕುದೂರಿನಿಂದ ಹುಲಿಕಲ್ ಮಾರ್ಗದ ನಡುವೆ ತಿಮ್ಮಕ್ಕ ಅವರು ನೆಟ್ಟಿರುವ ಮರಗಳನ್ನು ಕಾಣಬಹುದು. ಈ ಆಲದ ಮರಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಈ ಮರಗಳನ್ನೇ ತಿಮ್ಮಕ್ಕ ಅವರು ಮಕ್ಕಳಂತೆ ಕಾಣುತ್ತಿದ್ದರು.