ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೃಷ್ಣಬೈರೇಗೌಡ ಸ್ಪೋಟಕ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ನಮ್ಮ ಸರ್ಕಾರ ರಚನೆಯಾದಾಗಲೇ ಎರಡೂವರೆ ವರ್ಷಗಳ ನಂತರ ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ನಿರ್ಧಾರವಾಗಿತ್ತು. ಎಂದು ಗುಟ್ಟು ರಟ್ಟು ಮಾಡುವ ಮೂಲಕ ಸಂಪುಟ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಈ ಸೂತ್ರವನ್ನು ಸಿದ್ಧಪಡಿಸಲಾಗಿತ್ತು. ಸಚಿವ ಸ್ಥಾನ ವಂಚಿತರಾದ ಹಲವು ಅರ್ಹ ಶಾಸಕರು ಹೊರಗಡೆ ಇದ್ದಾರೆ. ಅವರಿಗೂ ಅಧಿಕಾರದಲ್ಲಿ ಅವಕಾಶ ನೀಡಬೇಕು, ಆಡಳಿತದಲ್ಲಿ ಹೊಸತನ ತರಬೇಕು ಎನ್ನುವುದು ಹೈಕಮಾಂಡ್ ಹಾಗೂ ಪಕ್ಷದ ನಾಯಕರ ಉದ್ದೇಶವಾಗಿತ್ತು. ಆ ನಿರ್ಧಾರದಂತೆ ಎರಡೂವರೆ ವರ್ಷದ ಬಳಿಕ ಸಂಪುಟ ಪುನರಚನೆ ನಡೆಯುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ನನಗೆ ಹೊಟ್ಟೆ ತುಂಬಿದೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ :-
ಇದೇ ವೇಳೆ, ತಮ್ಮ ಸಚಿವ ಸ್ಥಾನದ ಬಗ್ಗೆ ಮಾತನಾಡಿದ ಕೃಷ್ಣ ಬೈರೇಗೌಡರು, ಪಕ್ಷ ನನಗೆ ಅರ್ಹತೆಗಿಂತ ಹೆಚ್ಚಿನ ಅವಕಾಶಗಳನ್ನು ನೀಡಿದೆ. ನಾನು ಈಗಾಗಲೇ ಮೂರು ಬಾರಿ ಸಚಿವನಾಗಿದ್ದೇನೆ. ಸಚಿವ ಸ್ಥಾನದಿಂದಾಗಿ ಕ್ಷೇತ್ರದ ಕೆಲಸಗಳಿಗೆ ಸಂಪೂರ್ಣವಾಗಿ ಗಮನ ಹರಿಸಲು ಆಗುತ್ತಿಲ್ಲ. ಅವಕಾಶದ ವಿಚಾರದಲ್ಲಿ ನನಗೆ ಹೊಟ್ಟೆ ತುಂಬಿದೆ. ಆದರೆ ಕೆಲಸದ ವಿಚಾರದಲ್ಲಿ ಇನ್ನೂ ಹಸಿವಿದೆ. ಹೀಗಾಗಿ, ಹೈಕಮಾಂಡ್ ಸೂಚಿಸಿದರೆ ಒಂದು ಕ್ಷಣವೂ ಯೋಚಿಸದೆ ಸಚಿವ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಎಂದು ಭಾವುಕರಾಗಿ ನುಡಿದರು. ಸಂಪುಟ ಪುನರ್ ರಚನೆ ಎಂದಾಕ್ಷಣ ನಾಯಕತ್ವ ಬದಲಾವಣೆಯ ಚರ್ಚೆಯೂ ಮುನ್ನೆಲೆಗೆ ಬರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ಪುನರಚನೆಗೂ ಮುಖ್ಯಮಂತ್ರಿ ಬದಲಾವಣೆಗೂ ಯಾವುದೇ ಸಂಬಂಧ ಕಲ್ಪಿಸುವುದು ಬೇಡ. ನಾಯಕತ್ವದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಬಿಜೆಪಿಯವರಿಗೆ ಅಧಿಕಾರ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ಅವರ ಸ್ಥಿತಿ ದ್ರಾಕ್ಷಿ ಹುಳಿ ಎಂದಂತಾಗಿದೆ. ಅವರಿಗೆ ಅಧಿಕಾರದ ಹಪಹಪಿ ಬಿಟ್ಟರೆ ಬೇರೆ ಜ್ಞಾನವಿಲ್ಲ. ನಾವು ಜವಾಬ್ದಾರಿಯುತವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಇನ್ನು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುತ್ತಾ, ಒಂದು ಕುಟುಂಬದಲ್ಲಿ ಐದು ಬೆರಳು ಸಮನಾಗಿರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಅಭಿಪ್ರಾಯಗಳಿರುತ್ತವೆ. ಎಲ್ಲವನ್ನೂ ನಮ್ಮ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಂತಿಮವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.