ಹಾಸನ : ಡಿಸಿಎಂ ಡಿ.ಕೆ.ಶಿವಕುಮಾರ್ಗೆ ತಮ್ಮ ಪಕ್ಷದೊಳಗೇ ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ನನಗೆ ದೆಹಲಿಯಿಂದ ಬಿಜೆಪಿ ನಾಯಕರ ಕಾಲ್ ಬಂದಿತ್ತು ಅಂತಾ ಏನೇನೋ ಮಾತಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ನೊಳಗೆ ಡಿಕೆಶಿಗೆ ಭಧ್ರತೆ ಇಲ್ಲ ಎನ್ನುವುದು ಅರ್ಥವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ದೇವಾಲಯದ ಹೊರಭಾಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅವರಿಗೆ ದೆಹಲಿಯಿಂದ ಕಾಲ್ ಬಂದಿದ್ದರೆ, ಆಗಲೇ ಹೇಳಬೇಕಿತ್ತು, ಅದನ್ನು ತಕ್ಷಣವೇ ಸ್ಪಷ್ಟಪಡಿಸಬೇಕಾಗಿತ್ತು. ಈಗ ಕಾಂಗ್ರೆಸ್ ಒಳಗೆ ಅವಕಾಶ ತಪ್ಪುವ ಆತಂಕದಿಂದ ಈ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಜಕಾರಣಿಗಳ ಮಾತು ಯಾವಾಗಲೂ ಸತ್ಯ ಇರಲ್ಲ, ಕೆಲವೊಮ್ಮೆ ತಮ್ಮ ಅನುಕೂಲಕ್ಕಾಗಿ ಸುಳ್ಳು ಹೇಳುತ್ತಾರೆ. ಅವರು ನಿಜ ಹೇಳ್ತಾರೋ, ಸುಳ್ಳು ಹೇಳ್ತಾರೋ ಅವರಿಗೆ ಮಾತ್ರ ಗೊತ್ತು ಎಂದು ವ್ಯಂಗ್ಯವಾಡಿದರು.
ಇನ್ನು ರಾಷ್ಟ್ರದ್ರೋಹಿಗಳ ಓಲೈಕೆಗಾಗಿ ಆರ್ಎಸ್ಎಸ್ ಟೀಕೆ: ಪ್ರಿಯಾಂಕ್ ಖರ್ಗೆ ನೀಡಿದ ಆರ್ಎಸ್ಎಸ್ ಕುರಿತು ಹೇಳಿಕೆಗೆ ತಿರುಗೇಟು ನೀಡಿ, ನಿಸ್ವಾರ್ಥ ಸೇವೆಗೆ ಹೆಸರಾಗಿರುವ ಸಂಘಟನೆಯೇ ಆರ್ಎಸ್ಎಸ್. ರಾಷ್ಟ್ರಹಿತದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸಂಸ್ಥೆಯ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರು ದೇಶದ್ರೋಹಿ, ಮತೀಯತಾವಾದಿ ಹಾಗೂ ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವವರ ವಿರುದ್ಧ ಮಾತನಾಡಿದ್ದರೆ ಸರಿಯಾಗಿತ್ತು. ಆದರೆ ಅವರ ಮಾತು ರಾಷ್ಟ್ರಹಿತದ ಮಾತಲ್ಲ ಎಂದರು. ಭಾರತ ವಿಶ್ವಗುರು ಆಗಬೇಕು ಎಂಬ ಹಂಬಲದಿಂದ ಆರ್ಎಸ್ಎಸ್ ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತಿದೆ. ನಿಮ್ಮ ಮನಸ್ಥಿತಿ ಬದಲಾಯಿಸಿ. ನಿಮ್ಮ ಮಾತುಗಳಿಂದ ದೇಶದ್ರೋಹಿಗಳು ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಮಾತ್ರ ಲಾಭವಾಗುತ್ತಿದೆ. ಜಾತಿ-ಜಾತಿ ಎತ್ತಿಕಟ್ಟಿ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿದೆ. ರಾಷ್ಟ್ರಭಕ್ತ ಸಂಘಟನೆಯ ವಿರುದ್ಧ ಅಪಪ್ರಚಾರ ಮಾಡ್ತಾ ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು. ದೇಶಭಕ್ತಿಯ ಶಿಕ್ಷಣ ಅಪರಾಧವೇ? ಜಾತಿ ವ್ಯವಸ್ತೆ ಅಳಿಸುವ ಬಗ್ಗೆ ಜಾಗೃತಿ ಮೂಡಿಸುವುದು ತಪ್ಪೇ! ಆರ್ಎಸ್ಎಸ್ಗೆ ಯಾವುದೇ ಸದಸ್ಯತ್ವದ ಅವಶ್ಯಕತೆ ಇಲ್ಲ. ಬನ್ನಿ ಶಾಖೆಗೆ, ನಿಮಗೆ ಒಪ್ಪದಿದ್ದರೆ ಹೇಳಿ ಎಂದು ಆಹ್ವಾನ ನೀಡಿದರು. ಸುಧಾ ಮೂರ್ತಿ ಕುರಿತ ಸಮೀಕ್ಷೆ ವಿವಾದಕ್ಕೂ ಪ್ರತಿಕ್ರಿಯೆ ನೀಡಿದರು. ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ.