ಬೆಂಗಳೂರು: ಲಾಲ್ಬಾಗ್ ಹಾಳು ಮಾಡೋದಕ್ಕೆ ನಾನು ಮೂರ್ಖ ಅಲ್ಲ. ನನಗೂ ಲಾಲ್ಬಾಗ್ ಇತಿಹಾಸ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಲಾಲ್ಬಾಗ್ನಲ್ಲಿ ಟನಲ್ ರೋಡ್ ವಿರೋಧಿಸಿ ಬಿಜೆಪಿಯಿಂದ ಸಹಿ ಸಂಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಒಳ್ಳೆಯದು ಮಾಡಲಿ, ಜಾಗೃತಿ ಮೂಡಿಸಲಿ. ಅಶೋಕ್ ಅಧ್ಯಕ್ಷತೆಯಲ್ಲೇ ಸಮಿತಿ ಮಾಡುತ್ತೇನೆ. ನಾನು ಸಿದ್ಧನಿದ್ದೇನೆ, ಯಾರ್ಯಾರು ಸದಸ್ಯರು ಬೇಕು ಎಂದು ಅವರೇ ಹೇಳಲಿ. ಇದು ನನ್ನ ಆಸ್ತಿಯಲ್ಲ ಅಥವಾ ಯಾರ ಆಸ್ತಿಯೂ ಅಲ್ಲ. ಇದು ಸಾರ್ವಜನಿಕರಿಗಾಗಿ ಮಾಡುತ್ತಿರುವ ಯೋಜನೆ. ನಾನು ಎಲ್ಲಾ ರೀತಿಯ ಅಧ್ಯಯನವನ್ನೂ ಮಾಡಿದ್ದೇನೆ ಎಂದರು.
ಇದನ್ನೂ ಓದಿ : ‘ಟನಲ್ ರೋಡಲ್ಲಿ ಓಡಾಡುವ ದುಡ್ಡಲ್ಲಿ 1 ಬೆಂಜ್ ಕಾರು, 1 3BHK ಮನೆ ಬರುತ್ತೆ’
ಇನ್ನು ಲಾಲ್ಬಾಗ್ನಲ್ಲಿ ಎಷ್ಟು ಜಾಗ ಉಪಯೋಗ ಆಗ್ತಿದೆ, ಎಷ್ಟು ಉಪಯೋಗ ಆಗ್ತಿಲ್ಲ ಎಲ್ಲಾ ಗೊತ್ತಿದೆ. ಅವರು ರಾಜಕಾರಣ ಮಾಡಬೇಕು. ಅವರದ್ದು ರಾಜಕಾರಣ, ಯಾವುದೇ ಅಭಿವೃದ್ಧಿ ಬೇಕಿಲ್ಲ. ಟನಲ್ ಮಾಡಿದ್ದಕ್ಕೆ ಅಲ್ವಾ ಮೆಟ್ರೋ ಮಾಡಲು ಆಗಿದ್ದು.ಬಿಜೆಪಿಯವರು ತಂದಿದ್ದಾ ಮೆಟ್ರೋ? ದಾಖಲೆ ತೆಗೆಸಿ ನೋಡಲಿ. ಎಸ್.ಎಂ.ಕೃಷ್ಣ ಕಾಲದಲ್ಲಿ 10 ದೇಶ ತಿರುಗಿ ನಾನು ವರದಿ ಕೊಟ್ಟೆ. ಕೇಂದ್ರದಲ್ಲಿ ವಾಜಪೇಯಿ, ಅನಂತ್ಕುಮಾರ್ಗೆ ವರದಿ ಕೊಟ್ಟು ಬಂದಿದ್ದೆವು. ಜಾರ್ಜ್ ಕಾಲದಲ್ಲಿ ಸ್ಟೀಲ್ ಫ್ಲೈಓವರ್ಗೆ ವಿರೋಧ ಮಾಡಿದ್ರು ಎಂದು ಕಿಡಿಕಾರಿದರು.
ಆ ಸಂಸದ ರೈಲು ಮಾಡಿ ಅಂತಾನೆ, ಎಲ್ಲಿದೆ ಜಾಗ? ಕೇಂದ್ರ ಸರ್ಕಾರ ಮಾಡಲಿ. ಟ್ರಾಯ್ ವ್ಯವಸ್ಥೆ ಮಾಡಿ ಅಂತಾರೆ, ದಿನಕ್ಕೆ 100 ಜನ ಸಾಯ್ತಾರೆ ಅಷ್ಟೇ. ಪ್ರಾಯೋಗಿಕವಾಗಿ ಅದು ಸಾಧ್ಯವಿಲ್ಲ. ತೇಜಸ್ವಿ ಸೂರ್ಯ ದೊಡ್ಡ ಲೀಡರ್, ಬಹಳ ಬುದ್ಧಿವಂತ, ಫ್ಲೈಟ್ ಡೋರ್ ಓಪನ್ ಮಾಡ್ಬಿಟ್ಟ. ಕಾರು ಬೇಡ ಅಂತಿದ್ದ, ಆಮೇಲೆ ಮದ್ವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತಾ ಅರ್ಜಿ ಹಾಕಿದ್ದ. ಅಮೆರಿಕಕ್ಕೆ ಹೋಗಿ ಟ್ರಂಪ್ ಬಳಿ ಉಗಿಸಿಕೊಂಡ. ಅನುಮತಿ ಇಲ್ಲದೆ ಹೋಗಿ ಉಗಿಸಿಕೊಂಡು ಬಂದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು? ನೀನು ಮೆಟ್ರೋದಲ್ಲಿ ಓಡಾಡು. ಎಲ್ಲಾ ಬಿಜೆಪಿಯವರು ಕಾರು ಬಿಟ್ಟು ಓಡಾಡಲಿ ಎಂದು ವಾಗ್ದಾಳಿ ನಡೆಸಿದರು.